Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶಿಷ್ಟ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರಮವಾದ ‘ವನತಾರಾ’ ಪ್ರಧಾನಮಂತ್ರಿಗಳಿಂದ ಉದ್ಘಾಟನೆ

ವಿಶಿಷ್ಟ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರಮವಾದ ‘ವನತಾರಾ’ ಪ್ರಧಾನಮಂತ್ರಿಗಳಿಂದ ಉದ್ಘಾಟನೆ


ಗುಜರಾತ್‌ನ ಜಾಮ್‌ನಗರದಲ್ಲಿ ‘ವನತಾರಾ’ ವಿಶಿಷ್ಟ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಶ್ರೀ ಅನಂತ್ ಅಂಬಾನಿ ಮತ್ತು ಅವರ ತಂಡದ ದಯಾಮಯ ಪ್ರಯತ್ನಗಳನ್ನು ಶ್ಲಾಘಿಸಿರುವ ಅವರು, ಪರಿಸರ ಸುಸ್ಥಿರತೆ ಮತ್ತು ವನ್ಯಜೀವಿ ಕಲ್ಯಾಣವನ್ನು ಉತ್ತೇಜಿಸುವ ವನತಾರಾ ಉಪಕ್ರಮವು ಪ್ರಾಣಿಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ:

“ಪರಿಸರ ಸುಸ್ಥಿರತೆ ಮತ್ತು ವನ್ಯಜೀವಿ ಕಲ್ಯಾಣವನ್ನು ಉತ್ತೇಜಿಸುವ ಜೊತೆಜೊತೆಗೆ ಪ್ರಾಣಿಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುವ ವಿಶಿಷ್ಟ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿಗಾಗಿನ ವನತಾರಾ ಉಪಕ್ರಮವನ್ನು ಉದ್ಘಾಟಿಸಿದೆ.  ಈ ಸಹಾನುಭೂತಿಯ ಪ್ರಯತ್ನಕ್ಕಾಗಿ ನಾನು ಅನಂತ್ ಅಂಬಾನಿ ಮತ್ತು ಅವರ ಇಡೀ ತಂಡವನ್ನು ಶ್ಲಾಘಿಸುತ್ತೇನೆ.”

“ವನತಾರಾದಂತಹ ಪ್ರಯತ್ನವು ನಿಜವಾಗಿಯೂ ಶ್ಲಾಘನೀಯ, ಇದು ನಮ್ಮ ಭೂಗ್ರಹದ ಸಹಜೀವಿಗಳನ್ನು ರಕ್ಷಿಸುವ ನಮ್ಮ ಶತಮಾನಗಳ ಪ್ರಾಚೀನ ಪದ್ಧತಿಯ ಅದ್ಭುತ ಉದಾಹರಣೆಯಾಗಿದೆ. ಇಲ್ಲಿವೆ ಕೆಲವು ನೋಟಗಳು…”

“ಜಾಮ್‌ನಗರದ ವನತಾರಾಕ್ಕೆ ನನ್ನ ಭೇಟಿಯ ಇನ್ನೂ ಕೆಲವು ಚಿತ್ರಗಳಿವು:

ವನತಾರಾದಲ್ಲಿ ನಾನು ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಆನೆಯನ್ನು ನೋಡಿದೆ. ಆ ಗಜರಾಜನಿಗೆ ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡಲಾಯಿತು. ಇತರ ಆನೆಗಳು ಸಹ ಇದ್ದವು, ಅವು ಕುರುಡಾಗಿದ್ದವು, ಅವುಗಳ ಮಾವುತರೇ ಆ ಸ್ಥಿತಿಗೆ ಕಾರಣ ಎಂಬುದು ವಿಪರ್ಯಾಸ. ಮತ್ತೊಂದು ಆನೆಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದು ಒಂದು ಪ್ರಮುಖ ಪ್ರಶ್ನೆಯನ್ನು ಒತ್ತಿ ಕೇಳುತ್ತದೆ – ಜನರು ಹೇಗೆ ಇಷ್ಟೊಂದು ಅಸಡ್ಡೆ ಮತ್ತು ಕ್ರೂರವಾಗಿ ವರ್ತಿಸಲು ಸಾಧ್ಯ? ಇಂತಹ ಬೇಜವಾಬ್ದಾರಿತನವನ್ನು ಕೊನೆಗಾಣಿಸೋಣ ಮತ್ತು ಪ್ರಾಣಿಗಳೆಡೆಗೆ ದಯೆಯನ್ನು ತೋರುವತ್ತ ಗಮನ ಹರಿಸೋಣ. ”

“ಇನ್ನೂ ಅನೇಕ ನಿದರ್ಶನಗಳಿವೆ. ಸಿಂಹಿಣಿಗೆ ವಾಹನ ಡಿಕ್ಕಿ ಹೊಡೆದು ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದೆ. ಆ ಜೀವಿಗೆ ಸೂಕ್ತ ಆರೈಕೆ ದೊರೆಯುತ್ತಿತ್ತು. ಚಿರತೆ ಮರಿಯೊಂದು ತನ್ನ ಕುಟುಂಬದಿಂದ ಬೇರ್ಪಟ್ಟಿದ್ದು, ಅದಕ್ಕೆ ಸರಿಯಾದ ಪೌಷ್ಟಿಕಾಂಶದ ಆರೈಕೆಯೊಂದಿಗೆ ಹೊಸ ಜೀವನ ದೊರೆಯಿತು. ಇಂತಹ ಹಲವು ಪ್ರಾಣಿಗಳಿಗೆ ಆರೈಕೆ ನೀಡುತ್ತಿರುವ ವನತಾರಾ ತಂಡಕ್ಕೆ ನನ್ನ ಅಭಿನಂದನೆಗಳು”.

 

 

*****